Edited By | krantisamachar.in web | Updated: 6 Feb 2024, 3:13 pm
ಗದಗ: ಸತತ 38 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ನಗರಕ್ಕೆ ಆಗಮಿಸಿದ ಹಿನ್ನಲೆಯಲ್ಲಿ ಯೋಧನಿಗೆ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ವತಿಯಿಂದ ಬೈಕ್ ಜಾಥಾ ಮೂಲಕ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ತಾಲೂಕಿನ ನರಸಾಪೂರ ಗ್ರಾಮದ ಯೋಧ ಅಣ್ಣಪ್ಪ ಜಾಲಿಹಾಳ ಹಾಗೂ ಅವರ ಧರ್ಮಪತ್ನಿ ಅವರನ್ನು ರೈಲ್ವೆ ನಿಲ್ದಾಣದಲ್ಲಿ ಆರತಿ ಎತ್ತಿ ಹೂಮಳೆ ಸುರಿಸಿ, ಶಾಲು ಹೋದಿಸಿ ಸನ್ಮಾನಿಸಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಬಳಿಕ ಬೈಕ್ ಜಾಥಾ ಮೂಲಕ ಜಯಘೋಷಗಳೊಂದಿಗೆ ಊರಿಗೆ ಕರೆ ತರಲಾಯಿತು.
ಯೋಧನ ಕುಟುಂಬಸ್ಥರಿಂದ ತುಲಾಭಾರ
ನಗರದ ರೈಲ್ವೆ ನಿಲ್ದಾಣದಿಂದ ಜೆಂಡಾ ಸರ್ಕಲ್, ಗಾಂಧಿ ಸರ್ಕಲ್ ಮಾರ್ಗವಾಗಿ ಐತಿಹಾಸಿಕ ವೀರೇಶ್ವರ ಪುಣ್ಯಾಶ್ರಮದ ವರೆಗೆ ತೆರೆದ ವಾಹನದಲ್ಲಿ ಅದ್ದೂರಿ ಮೇರವಣಿಗೆ ನಡೆಸಲಾಯಿತು. ನಂತರ ವೀರೇಶ್ವರ ಪುಣ್ಯಾಶ್ರಮದ ಪಿಠಾಧಿಪತಿ ಡಾ ಕಲ್ಲಯ್ಯಜ್ಜನವರಿಗೆ ಯೋಧನ ಕುಟುಂಬಸ್ಥರಿಂದ ತುಲಾಭಾರ ಕಾರ್ಯಕ್ರಮ ನಡೆಯಿತು. ಈ ವೇಳೆ ಆಶೀರ್ವಚನ ನೀಡಿದ ಶ್ರೀಗಳು ಇದು 2227 ತುಲಾಭಾರ ಕಾರ್ಯಕ್ರಮವಾಗಿದೆ. ಯೋಧರು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಗಾಳಿ, ಬಿಸಿಲು, ಮಳೆ ಎನ್ನದೆ ದೇಶಕ್ಕಾಗಿ ಶ್ರಮ ವಹಿಸುತ್ತಾರೆ. ಗಡಿಯಲ್ಲಿ ನಮ್ಮನ್ನು ಕಾಯ್ದು ನಿವೃತ್ತಿ ಹೊಂದಿ ಸಾಮಾಜಿಕ ಜೀವನದಲ್ಲಿ ಭಾಗವಹಿಸುತ್ತಾರೆ. ಅವರ ನಿವೃತ್ತ ಜೀವನ ಸುಖಕರವಾಗಿರಲಿ. ಸಾರ್ವಜನಿಕರು ಹಾಗೂ ದೇಶಭಕ್ತರು ಅವರ ಜೊತೆ ಉತ್ತಮ ಬಾಂದವ್ಯ ಹೊಂದಬೇಕು ಎಂದು ಹೇಳಿದರು.ಈ ವೇಳೆ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಸಲಿಂಗಪ್ಪ ಮುಂಡರಗಿ, ಅರೆ ಸೇನಾ ಪಡೆಯ ಜಿಲ್ಲಾ ಗೌರವಾಧ್ಯಕ್ಷ ಜೊಜರಾಜ, ಹಾಗೂ ವೀರ ನಾರಿಯರ ಅಧ್ಯಕ್ಷೆ ಇಧಿರಾ ಹೆಬಸೂರ ಮತ್ತು ಪದಾದಿಕಾರಿಗಳು, ಸದಸ್ಯರು ಸೇರಿದಂತೆ ಯೋಧನ ಕುಟುಂಬಸ್ಥರು ಉಪಸ್ಥಿತರಿದ್ದರು.