CongressTech

ಮತ್ತೆ ಮೂವರಿಗೆ ‘ಭಾರತ ರತ್ನ’: ಪಿವಿ ನರಸಿಂಹ ರಾವ್, ಚೌಧರಿ ಚರಣ್ ಸಿಂಗ್, ಎಂಎಸ್ ಸ್ವಾಮಿನಾಥನ್‌ಗೆ ಗೌರವ

ಹೈಲೈಟ್ಸ್‌:

  • ಮತ್ತೆ ಮೂವರು ಗಣ್ಯರಿಗೆ ಭಾರತ ರತ್ನ ಪುರಸ್ಕಾರ ಘೋಷಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ
  • ಮಾಜಿ ಪ್ರಧಾನಿಗಳಾದ ಪಿವಿ ನರಸಿಂಹ ರಾವ್ ಮತ್ತು ಚೌಧರಿ ಚರಣ್ ಸಿಂಗ್ ಅವರಿಗೆ ಗೌರವ ಪ್ರಕಟ
  • ಖ್ಯಾತ ಕೃಷಿ ವಿಜ್ಞಾನಿ ಎಂಎಸ್ ಸ್ವಾಮಿನಾಥನ್ ಅವರಿಗೂ ಮರಣೋತ್ತರವಾಗಿ ಭಾರತ ರತ್ನ ಘೋಷಣೆ

ಹೊಸದಿಲ್ಲಿ: ಬಿಹಾರದ ಮಾಜಿ ಸಿಎಂ ಕರ್ಪೂರಿ ಠಾಕೂರ್ ಹಾಗೂ ಮಾಜಿ ಉಪ ಪ್ರಧಾನಿ ಎಲ್‌ಕೆ ಅಡ್ವಾಣಿ ಅವರಿಗೆ ‘ಭಾರತ ರತ್ನ’ ಪುರಸ್ಕಾರ ಘೋಷಣೆ ಮಾಡಿದ್ದ ಕೇಂದ್ರ ಸರ್ಕಾರ, ಮತ್ತೆ ಮೂವರನ್ನು ದೇಶದ ಸರ್ವೋನ್ನತ ಪುರಸ್ಕಾರಕ್ಕೆ ಆಯ್ಕೆ ಮಾಡಿದೆ. ಮಾಜಿ ಪ್ರಧಾನಿಗಳಾದ ಚೌಧರಿ ಚರಣ್ ಸಿಂಗ್ ಮತ್ತು ಪಿವಿ ನರಸಿಂಹರಾವ್ ಹಾಗೂ ಖ್ಯಾತ ಕೃಷಿ ವಿಜ್ಞಾನಿ ಎಂಎಸ್ ಸ್ವಾಮಿನಾಥನ್ ಅವರಿಗೆ ಮರಣೋತ್ತರವಾಗಿ ‘ಭಾರತ ರತ್ನ’ ನೀಡಲಾಗುವುದು ಎಂದು ಶುಕ್ರವಾರ ಪ್ರಕಟಿಸಿದೆ.

ಚುನಾವಣೆ ಸಂದರ್ಭದಲ್ಲಿ ‘ಭಾರತ ರತ್ನ’ಕ್ಕೆ ಗಣ್ಯರ ಆಯ್ಕೆ ಮಹತ್ವ ಪಡೆದಿದೆ. ಕಾಂಗ್ರೆಸ್ ನಾಯಕರಾಗಿದ್ದ ಪಿವಿ ನರಸಿಂಹ ರಾವ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ಅನೇಕ ಬಾರಿ ಶ್ಲಾಘಿಸಿದ್ದನ್ನು ಮತ್ತು ಕಾಂಗ್ರೆಸ್ ಅವರನ್ನು ಮೂಲೆಗುಂಪು ಮಾಡಿತ್ತು ಎಂದು ಆರೋಪಿಸಿದ್ದನ್ನು ಸ್ಮರಿಸಬಹುದು.

ಆದರೆ ಉತ್ತರ ಪ್ರದೇಶದ ಮಾಜಿ ಸಿಎ ಕೂಡ ಆಗಿದ್ದ ಚರಣ್ ಸಿಂಗ್ ಅವರ ಆಯ್ಕೆ ಕುತೂಹಲ ಮೂಡಿಸಿದೆ. ಐಎನ್‌ಡಿಐಎ ಮೈತ್ರಿಕೂಟದ ಭಾಗವಾಗಿದ್ದ ರಾಷ್ಟ್ರೀಯ ಲೋಕ ದಳ (ಆರ್‌ಎಲ್‌ಡಿ) ನಾಯಕ ಹಾಗೂ ಚೌಧರಿ ಚರಣ್ ಸಿಂಗ್ ಅವರ ಮೊಮ್ಮಗ ಜಯಂತ್ ಚೌಧರಿ ಅವರು ಮೈತ್ರಿಕೂಟದಿಂದ ಹೊರಬಂದು ಬಿಜೆಪಿ ಜತೆ ಕೈ ಜೋಡಿಸಿದ ಬೆನ್ನಲ್ಲೇ, ಈ ಆಯ್ಕೆ ಪ್ರಕಟಿಸಲಾಗಿದೆ. ಚರಣ್ ಸಿಂಗ್ ಅವರಿಗೆ ಭಾರತ ರತ್ನ ಗೌರವ ನೀಡಬೇಕು ಎಂದು ಆರ್‌ಎಲ್‌ಡಿ ಈ ಹಿಂದೆಯೇ ಕೇಂದ್ರವನ್ನು ಒತ್ತಾಯಿಸಿತ್ತು. ಅದೀಗ ಈಡೇರಿರುವುದು, ಲೋಕಸಭೆ ಚುನಾವಣೆಯಲ್ಲಿ ಉಭಯ ಪಕ್ಷಗಳ ಮೈತ್ರಿಯ ಪ್ರತಿಫಲ ಎನ್ನಲಾಗಿದೆ.

ಪಿವಿ ನರಸಿಂಹ ರಾವ್

1921ರ ಜೂನ್ 28ರಂದು ಈಗಿನ ತೆಲಂಗಾಣದ ವಾರಂಗಲ್ ಜಿಲ್ಲೆಯ ಲಕ್ನೇಪಲ್ಲಿ ಎಂಬ ಗ್ರಾಮದಲ್ಲಿನ ತೆಲುಗು ನಿಯೋಗಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಪಮುಲಪಾರ್ಥಿ ವೆಂಕಟ ನರಸಿಂಹ ರಾವ್ ಅವರು 1991ರ ಜೂನ್ 21ರಿಂದ 1996ರ ಮೇ 16ರವರೆಗೂ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು.

ಆಂಧ್ರಪ್ರದೇಶ ಕಾಂಗ್ರೆಸ್‌ನ ಕಾರ್ಯಕರ್ತರಾಗಿ, ಸಚಿವರಾಗಿ ಕಾರ್ಯ ನಿರ್ವಹಿಸಿದ ಅವರು, 1971ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೆ ತಂದಿದ್ದರು. ಇಂದಿರಾ ಗಾಂಧಿ ಅವರ ಬೆಂಬಲಿಗರಾಗಿದ್ದ ಪಿವಿಎನ್, ಬಳಿಕ ರಾಷ್ಟ್ರ ರಾಜಕಾರಣಕ್ಕೆ ಕಾಲಿರಿಸಿದ್ದರು. 1980- 84ರ ನಡುವೆ ವಿದೇಶಾಂಗ ವ್ಯವಹಾರಗಳ ಸಚಿವರೂ ಆಗಿದ್ದರು.

1991ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗ ರಾಜಕಾರಣದಿಂದ ನಿವೃತ್ತರಾಗಲು ಬಯಸಿದ್ದ ಅವರು, ರಾಜೀವ್ ಗಾಂಧಿ ಹತ್ಯೆಯ ಬಳಿಕ ಪ್ರಧಾನಿಯಾಗುವ ಸನ್ನಿವೇಶ ಎದುರಾಯಿತು. ಕಾಂಗ್ರೆಸ್‌ನಲ್ಲಿ ಐದು ವರ್ಷ ಅಧಿಕಾರ ಪೂರ್ಣಗೊಳಿಸಿದ ನೆಹರೂ- ಗಾಂಧಿ ಕುಟುಂಬದ ಹೊರಗಿನ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆ ಅವರದು. ಅವರ ಅವಧಿಯಲ್ಲಿ ಹಣಕಾಸು ಸಚಿವರಾಗಿದ್ದ ಡಾ ಮನಮೋಹನ್ ಸಿಂಗ್ ಅವರು ಆರ್ಥಿಕ ಉದಾರೀಕರಣ ನೀತಿಯನ್ನು ಅಳವಡಿಸಿದ್ದರು.

ಚೌಧರಿ ಚರಣ್ ಸಿಂಗ್

ಈಗಿನ ಉತ್ತರ ಪ್ರದೇಶದ ನೂರ್ಪುರ ಗ್ರಾಮದಲ್ಲಿ 1902ರ ಡಿ 23ರಂದು ಜನಿಸಿದ ಚರಣ್ ಸಿಂಗ್ ಅವರು ಮಹಾತ್ಮ ಗಾಂಧಿ ಅವರಿಂದ ಸ್ಫೂರ್ತಿ ಪಡೆದು ರಾಜಕೀಯ ಪ್ರವೇಶಿಸಿದವರು. ದೇಶದ ಐದನೇ ಪ್ರಧಾನಿಯಾಗಿ 1979ರ ಜುಲೈ 28ರಿಂದ ಆಗಸ್ಟ್ 20ರವರೆಗೆ 23 ದಿನ ಮಾತ್ರ ಅವರು ಪ್ರಧಾನಿಯಾಗಿದ್ದರು. ಸಂಸತ್‌ನಲ್ಲಿ ವಿಶ್ವಾಸ ಮತ ಸಾಬೀತುಪಡಿಸಲಾಗದೆ ರಾಜೀನಾಮೆ ನೀಡಿದ ಏಕೈಕ ಪ್ರಧಾನಿ ಎನಿಸಿದ್ದರು. ಆದರೆ 1980ರ ಜನವರಿವರೆಗೂ ಅವರು ಹಂಗಾಮಿ ಪ್ರಧಾನಿಯಾಗಿ ಮುಂದುವರಿದಿದ್ದರು.

ಹೆಚ್ಚಿನ ಕಾಲ ಕಾಂಗ್ರೆಸ್ ಸದಸ್ಯರಾಗಿದ್ದರೂ 1980ರಲ್ಲಿ ಲೋಕದಳ ಸ್ಥಾಪಿಸಿದರು. 1967- 1968ರಲ್ಲಿ ಅವರು ಉತ್ತರ ಪ್ರದೇಶದ ಸಿಎಂ ಆಗಿದ್ದರು. ಸಮ್ಮಿಶ್ರ ಸರ್ಕಾರದ ಒಳಗಿನ ಕಿತ್ತಾಟದ ಬಳಿಕ ರಾಜೀನಾಮೆ ನೀಡಿದ್ದರು.

ಕಾಂಗ್ರೆಸ್ ಪಕ್ಷ ವಿಭಜನೆಯಾದ ಬಳಿಕ 1970ರ ಫೆಬ್ರವರಿಯಲ್ಲಿ ಎರಡನೇ ಅವಧಿಗೆ ಅವರು ಇಂದಿರಾ ಕಾಂಗ್ರೆಸ್ ಬೆಂಬಲದೊಂದಿಗೆ ಮುಖ್ಯಮಂತ್ರಿಯಾದರು. ಆದರೆ ಕಾಂಗ್ರೆಸ್ ಜತೆಗಿನ ಮನಸ್ತಾಪದೊಂದಿಗೆ ಸೆಪ್ಟೆಂಬರ್‌ನಲ್ಲಿ ಅವರಿಂದ ರಾಜೀನಾಮೆ ಪಡೆಯಲಾಗಿತ್ತು.

ಚರಣ್ ಸಿಂಗ್ ಅವರು ಮೊರಾರ್ಜಿ ದೇಸಾಯಿ ಸರ್ಕಾರದಲ್ಲಿ ಸಂಪುಟ ಸಚಿವರಾಗಿದ್ದರು. 1977- 78ರಲ್ಲಿ ಕೇಂದ್ರ ಗೃಹ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. 1977ರ ಅಕ್ಟೋಬರ್ 3ರಂದು ಇಂದಿರಾ ಗಾಂಧಿ ಅವರನ್ನು ಬಂಧಿಸುವ ಸಾಹಸಕ್ಕೆ ಮುಂದಾದರು. ಇದೇ ವಿವಾದದಲ್ಲಿ ಅವರು ರಾಜೀನಾಮೆ ಸಲ್ಲಿಸಿದರು. 1987ರ ಮೇ 29ರಂದು ಚರಣ್ ಸಿಂಗ್ ನಿಧನರಾದರು.

ಎಂಎಸ್ ಸ್ವಾಮಿನಾಥನ್

ಹಸಿರು ಕ್ರಾಂತಿಯ ಹರಿಕಾರ ಮಾಂಕೊಂಬು ಸಾಂಬಸಿವನ್ ಸ್ವಾಮಿನಾಥನ್ ಜನಿಸಿದ್ದು 1925ರ ಆಗಸ್ಟ್ 7ರಂದು. ಮದ್ರಾಸ್ ಪ್ರೆಸಿಡೆನ್ಸಿಯ ಕುಂಬಕೋಣಂ ಅವರ ಹುಟ್ಟೂರು. ಬಾಲ್ಯದಿಂದಲೇ ಕೃಷಿ ಮತ್ತು ಕೃಷಿಕರ ಜತೆಗಿನ ಒಡನಾಟ ಹೆಚ್ಚಿದ್ದ ಕಾರಣ ಅವರಿಗೆ ಈ ಕ್ಷೇತ್ರದ ಬಗ್ಗೆ ಅಪಾರ ಜ್ಞಾನ ಮತ್ತು ಆಸಕ್ತಿ

ಅವರನ್ನು ಆಗ್ರೋನಾಮಿಸ್ಟ್, ಕೃಷಿ ವಿಜ್ಞಾನಿ, ಸಸ್ಯ ತಳಿ ವಿಜ್ಞಾನಿ, ಆಡಳಿತಗಾರ, ಮಾನವತಾವಾದಿ ಹೀಗೆ ನಾನಾ ವಿಶೇಷಣಗಳಿಂದ ಬಣ್ಣಿಸಲಾಗುತ್ತದೆ. ದೇಶದ ಕೃಷಿ ಕ್ಷೇತ್ರದ ಬೆಳವಣಿಗೆಯ ದಿಕ್ಕು ಬದಲಿಸುವಲ್ಲಿ ಸ್ವಾಮಿನಾಥನ್ ಅವರ ಪಾತ್ರ ಬಹಳ ಹಿರಿದು.

ವಿಶ್ವಸಂಸ್ಥೆಯಿಂದ ‘ಫಾದರ್ ಆಫ್ ಎಕನಾಮಿಕ್ ಇಕೋಲಜಿ’ ಎಂದು ಕರೆಸಿಕೊಂಡ ಅವರು 1987ರಲ್ಲಿ ‘ವಿಶ್ವ ಆಹಾರ ಪ್ರಶಸ್ತಿ’ಗೆ ಭಾಜನರಾದವರು. 1960ರ ದಶಕದಲ್ಲಿ ಕ್ಷಾಮ ಸ್ವರೂಪದ ಸನ್ನಿವೇಶದಲ್ಲಿ ಭಾರತ ಹಾಗೂ ಪಾಕಿಸ್ತಾನವು ಆಹಾರ ಕೊರತೆಗೆ ಒಳಗಾದಂತೆ ಉಳಿಸುವಲ್ಲಿ ಸ್ವಾಮಿನಾಥನ್ ಪ್ರಮುಖ ಪಾತ್ರ ವಹಿಸಿದ್ದರು.

ಯುರೋಪ್‌ನ ವಿವಿಧ ದೇಶಗಳು, ಬ್ರಿಟನ್, ಅಮೆರಿಕ ಸೇರಿದಂತೆ ವಿವಿಧ ಕಡೆ ಅವರು ಅಧ್ಯಯನ, ಸಂಶೋಧನೆಗಳಲ್ಲಿ ತೊಡಗಿಸಿಕೊಂಡರು. ಅವರ ಜೀವಮಾನ ಪೂರ್ತಿ ಕೃಷಿ ಸಂಬಂಧಿ ಚಟುವಟಿಕೆಗಳಿಗೇ ಮೀಸಲಿಟ್ಟರು. ವಿವಿಧ ದೇಶಗಳ ಉನ್ನತ ಹುದ್ದೆ ಮತ್ತು ಪದವಿಗಳನ್ನು ನಿರಾಕರಿಸಿ ಅವರು 1954ರಲ್ಲಿ ಭಾರತಕ್ಕೆ ಮರಳಿದ್ದರು. ಆಲೂಗಡ್ಡೆ, ಗೋಧಿ, ಅಕ್ಕಿ ಬೆಳೆಗಳಲ್ಲಿನ ಪೌಷ್ಟಿಕತೆ ವೃದ್ಧಿಯಲ್ಲಿ ಸ್ವಾಮಿನಾಥನ್ ಅವರ ಸಂಶೋಧನೆ ನೀಡಿದ ಕೊಡುಗೆ ಅಪಾರ. ಅವರ ಮೂವರು ಹೆಣ್ಣುಮಕ್ಕಳಲ್ಲಿ ಒಬ್ಬರಾದ ಸೌಮ್ಯಾ ಸ್ವಾಮಿನಾಥನ್ ಅವರು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ. 2023ರ ಸೆ 28ರಂದು ಸ್ವಾಮಿನಾಥನ್ ಅವರು ಚೆನ್ನೈನಲ್ಲಿ ನಿಧನರಾದರು.

Shares:

Related Posts

Leave a Reply

Your email address will not be published. Required fields are marked *