DK Shivakumar Reaction On Mysore Lok Sabha Election : ಮೈಸೂರು – ಕೊಡಗು ಲೋಕಸಭಾ ಕ್ಷೇತ್ರಕ್ಕೆ ಲಕ್ಷ್ಮಣ್ ಅಭ್ಯರ್ಥಿ ಅಲ್ಲ, ಬದಲಿಗೆ ನಾನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಈ ಮಾತನ್ನು ಡಿಕೆಶಿ ಪದೇಪದೇ ಹೇಳುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಹೈಲೈಟ್ಸ್:
- ಮೈಸೂರು – ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಲಕ್ಷ್ಮಣ್
- ಬಿಜೆಪಿಯಿಂದ ಮಹಾರಾಜ ಯದುವೀರ್ ಒಡೆಯರ್ ಅವರಿಗೆ ಟಿಕೆಟ್, ಬಿಜೆಪಿ ಫುಲ್ ಸ್ವಿಂಗ್ ನಲ್ಲಿ ಪ್ರಚಾರ
- ನಾನು ಮತ್ತು ಸಿದ್ದರಾಮಯ್ಯ, ಕಾಂಗ್ರೆಸ್ ಅಭ್ಯರ್ಥಿ ಎಂದು ಹೇಳುತ್ತಿರುವ ಡಿಸಿಎಂ ಡಿ.ಕೆ.ಶಿವಕುಮಾರ್
ಮೈಸೂರು : ರಾಜ್ಯದಲ್ಲಿ ಲೋಕಸಭಾ ಚುನಾವಣಾ ಕಣ ರಂಗೇರಲಾರಂಭಿಸಿದೆ, ಚುನಾವಣೆ ವೇಳೆಯ ಮಾಮೂಲಿ ರಾಜಕೀಯ ವಿದ್ಯಮಾನದಂತೆ, ಅನ್ಯ ಪಕ್ಷಗಳ ವಿವಿಧ ಮುಖಂಡರುಗಳು/ ಕಾರ್ಯಕರ್ತರು ಬೇರೊಂದು ಪಕ್ಷಕ್ಕೆ ತಮ್ಮ ನಿಯತ್ತನ್ನು ಬದಲಿಸುತ್ತಿದ್ದಾರೆ. ಅದರ ಭಾಗವಾಗಿ, ಬೇರೆ ಪಕ್ಷಗಳ ನಾಯಕರು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ಸಿಗೆ ಸೇರ್ಪಡೆಗೊಂಡಿದ್ದಾರೆ.
ಮೈಸೂರು – ಕೊಡಗು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ – ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಯುವರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ಕಾಂಗ್ರೆಸ್ ಅಭ್ಯರ್ಥಿಯಾಗಿ ಎಂ.ಲಕ್ಷ್ಮಣ್ ಕಣದಲ್ಲಿರಲಿದ್ದಾರೆ. ಇನ್ನು, ಬಹುಜನ ಸಮಾಜ ಪಕ್ಷದಿಂದ ಚಂದ್ರಶೇಖರ ಪಿ. ಅವರು ಹುರಿಯಾಳು ಆಗಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಎಸ್ಪಿ ಶೇ. 1.87 ಮತವನ್ನು ಪಡೆದಿತ್ತು.