ಇಂಡಿಯನ್ ಸೂಪರ್ ಲೀಗ್ಕ್ರಿಕೆಟ್

ದ್ವಿಶತಕದ ಬಳಿಕ ಮಾಸ್ಟರ್‌ ಬ್ಲಾಸ್ಟರ್ ಕೊಟ್ಟ ಸಲಹೆ ಸ್ಮರಿಸಿದ ಯಶಸ್ವಿ ಜೈಸ್ವಾಲ್!

ವಿಶಾಖಪಟ್ಟಣ: ಇಂಗ್ಲೆಂಡ್ ವಿರುದ್ಧ ವೈಝಾಗ್ ಟೆಸ್ಟ್ ನ ಮೊದಲ ಇನಿಂಗ್ಸ್ ನಲ್ಲಿ ದ್ವಿಶತಕ (209 ರನ್) ಸಿಡಿಸಿದ ನಂತರ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್ ತೆಂಡೂಲ್ಕರ್ ಅವರ ನಡುವಿನ ಸಂವಾದವನ್ನು ಯಶಸ್ವಿ ಜೈಸ್ವಾಲ್ ಅವರು ಬಹಿರಂಗಪಡಿಸಿದ್ದಾರೆ. ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನವಿಡೀ ಬ್ಯಾಟಿಂಗ್ ಮಾಡಿದ್ದ ಯುವ ಎಡಗೈ ಆಟಗಾರ, ದ್ವಿತೀಯ ದಿನವೂ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ 290 ಎಸೆತಗಳಲ್ಲಿ 209 ರನ್ ಸಿಡಿಸಿ ಮಿಂಚು ಹರಿಸಿದ್ದರು.

ವಿಶಾಖಪಟ್ಟದ ನ ಎಸಿಎ-ವಿಡಿಸಿಎ ಮೈದಾನದಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ‌ ಐಪಿಎಲ್ ತಾರೆ ಯಶಸ್ವಿ ಜೈಸ್ವಾಲ್ ದ್ವಿಶತಕ (209 ರನ್), ದ್ವಿತೀಯ ಇನಿಂಗ್ಸ್ ನಲ್ಲಿ ಶುಭಮನ್ ಗಿಲ್ ಶತಕ (104 ರನ್) ಮತ್ತು ಅನುಭವಿ ವೇಗಿ ಜಸ್‌ಪ್ರೀತ್‌ ಬುಮ್ರಾ (9 ವಿಕೆಟ್) ಅವರ ಪ್ರದರ್ಶನದಿಂದಾಗಿ ರೋಹಿತ್ ಶರ್ಮಾ ಪಡೆ ಇಂಗ್ಲೆಂಡ್ ವಿರುದ್ಧ 106 ರನ್ ಗೆಲುವು ಸಾಧಿಸಿ 5 ಪಂದ್ಯಗಳ ಟೆಸ್ಟ್ ಸರಣಿಯನ್ನು 1-1 ರಿಂದ ಸಮಬಲಗೊಳಿಸಿತು.

ಸಚಿನ್ ತೆಂಡೂಲ್ಕರ್ ಗೆ ಅಭಾರಿ ಆಗಿರುತ್ತೇನೆ: ಯಶಸ್ವಿ ಜೈಸ್ವಾಲ್

ಇಂಗ್ಲೆಂಡ್ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯ ಗೆದ್ದ ನಂತರ ಜಿಯೋ ಸಿನಿಮಾದೊಂದಿಗೆ ಸಂವಾದ ನಡೆಸಿದ ಯಂಗ್ ಎಡಗೈ ಪ್ಲೇಯರ್ ಯಶಸ್ವಿ ಜೈಸ್ವಾಲ್, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ನೀಡಿದ ಸಲಹೆಯನ್ನು ಬಹಿರಂಗಪಡಿಸಿದ್ದಾರೆ.

“ನಾನು ಸಚಿನ್ ತೆಂಡೂಲ್ಕರ್ ಅವರೊಂದಿಗೆ ಆಪ್ತವಾಗಿ ಮಾತನಾಡಿದೆ. ಅವರು ನನ್ನ ದ್ವಿಶತಕವನ್ನು ಕೊಂಡಾಡಿದ್ದಲ್ಲದೆ ಮುಂದಿನ ದಿನಗಳಲ್ಲೂ ಇದೇ ರೀತಿಯ ಪ್ರದರ್ಶನ ನೀಡಲು ಸಲಹೆ ನೀಡಿದರು. ಸಮಯ ಬಹಳಾ ಮುಖ್ಯ, ಸ್ಥಿರ ಪ್ರದರ್ಶನವನ್ನು ಕಾಯ್ದುಕೊಳ್ಳುವುದು ಅತ್ಯಂತ ಪ್ರಮುಖವಾಗಿದೆ ಎಂದು ತಿಳಿ ಹೇಳಿದರು. ಸಚಿನ್ ಸರ್ ಅವರ ಹಾರೈಕೆಗೆ ಧನ್ಯವಾದ. ಅವರು ನನ್ನ ಪಾಲಿನ ದೇವರಾಗಿದ್ದು ಸದಾ ಅಭಾರಿಯಾಗಿರುತ್ತೇನೆ,” ಎಂದು ಐಪಿಎಲ್ ತಾರೆ ಹೇಳಿದ್ದಾರೆ.

ಶತಕ ಬಾರಿಸಲು ನಿರ್ಧರಿಸಿದ್ದೆ

ಟೀಮ್ ಇಂಡಿಯಾದ ಯುವ ಆಟಗಾರ ತಮ್ಮ ಆಟದ ಬಗ್ಗೆಯೂ ಪ್ರಸ್ತಾಪಿಸಿದ್ದು, ವಿಕೆಟ್ (ಪಿಚ್) ತುಂಬಾ ಚೆನ್ನಾಗಿದ್ದು ತಾಳ್ಮೆ ಪ್ರದರ್ಶಿಸಿ ದೊಡ್ಡ ಮೊತ್ತ ಗಳಿಸಲು ನಿರ್ಧರಿಸಿದ್ದೆ. ಮೊದಲ ಇನಿಂಗ್ಸ್ ನಲ್ಲಿ ನಿಯಮಿತವಾಗಿ ವಿಕೆಟ್ ಉರುಳುತ್ತಿದ್ದರಿಂದ ಕೊನೆಯವರೆಗೂ ವಿಕೆಟ್ ಕಾಯ್ದುಕೊಳ್ಳಲು ನಿರ್ಧರಿಸಿದ್ದೆ ಎಂದು ತಿಳಿಸಿದ್ದಾರೆ.

“ಕಳೆದ ಬಾರಿ ವೆಸ್ಟ್ ಇಂಡೀಸ್ ವಿರುದ್ಧ 171 ರನ್ ಬಾರಿಸಿದ್ದಾಗ, ದ್ವಿಶತಕ ಸಿಡಿಸಲು ಬಯಸಿದ್ದೆ. ಆದರೆ ಅಂದು ಸಾಧ್ಯವಾಗಲಿಲ್ಲ. ಅದರಿಂದ ನನ್ನ ಆಟದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ನಾನು ನನ್ನ ನಿತ್ಯ ದಿನಚರಿಯ ಬಗ್ಗೆ ಹೆಚ್ಚಿನ ಗಮನ ಹರಿಸಿದೆ. ರನ್ ಗಳನ್ನು ಗಳಿಸಲು ಆರಂಭಿಸಿದೆ. ಪ್ರಕ್ರಿಯೆಗಳು ತುಂಬಾ ಮುಖ್ಯ ಆಗಿರುತ್ತದೆ. ನಾನು ಜೀವನದಲ್ಲಿ ಯಾವ ನಿಯಮ ಪಾಲಿಸುತ್ತೇನೆ, ಯಾವ ಸಮಯಕ್ಕೆ ಮಲಗುತ್ತೇನೆ, ಯಾವ ಊಟ ಮಾಡುತ್ತೇನೆ, ನೆಟ್ ಅಭ್ಯಾಸವನ್ನು ಯಾವ ರೀತಿ ನಿಭಾಯಿಸುತ್ತೇನೆ ಎಂಬುದು ನನ್ನ ಪ್ರಕಾರ ತುಂಬಾ ಮುಖ್ಯ ಪಾತ್ರ ವಹಿಸುತ್ತವೆ,” ಎಂದು ಜೈಸ್ವಾಲ್ ಹೇಳಿದರು.

ಕ್ರೀಸ್ ಗೆ ಬಂದಾಗ ವಿಶ್ವಾಸ ಮೂಡುತ್ತದೆ

“ಯಶಸ್ಸು ಕಾಣಲು ಪಂದ್ಯದಲ್ಲಿ ನೀಡುವ ಪ್ರದರ್ಶನವೂ ಅಷ್ಟೇ ಮುಖ್ಯ ಆಗುತ್ತದೆ. ನಾನು ಯಾವಾಗ ಕ್ರೀಸ್ ಗೆ ಬ್ಯಾಟಿಂಗ್ ಮಾಡಲು ಹೋಗುತ್ತೆನೋ ನನ್ನಲ್ಲಿ ಆತ್ಮವಿಶ್ವಾಸ ಮೂಡುತ್ತದೆ. ಕಠಿಣ ಪರಿಶ್ರಮವು ನನ್ನಿಂದ ಉತ್ತಮ ಆಟ ತೆಗೆಸುತ್ತದೆ ಎಂಬುದು ನನಗೆ ತುಂಬಾ ಚೆನ್ನಾಗಿ ತಿಳಿದಿದೆ. ಆದ್ದರಿಂದ ಮೈದಾನದಲ್ಲಿ ನನ್ನ ನೈಜ ಆಟವನ್ನು ಪ್ರದರ್ಶಿಸಬೇಕಷ್ಟೇ. ನಾನು ಯಾವಾಗಲೂ ತಂಡಕ್ಕೆ ಉತ್ತಮ ಆಟವಾಡಲು ಪ್ರಯತ್ನಿಸುತ್ತೇನೆ‌. ಕಳೆದ ಪಂದ್ಯದಲ್ಲಿ ಅವರು (ರಾಹುಲ್ ದ್ರಾವಿಡ್ ಹಾಗೂ ರೋಹಿತ್ ಶರ್ಮಾ) ಹೆಚ್ಚಾಗಿ ನನ್ನ ಆಕ್ರಮಣಕಾರಿ ಆಟ ಪ್ರದರ್ಶಿಸಲು ಸೂಚಿಸಿದ್ದರು. ಮತ್ತು ನಾನು ವಿಭಿನ್ನ ಆಟವನ್ನು ಪ್ರದರ್ಶಿಸಿದೆ,” ಎಂದು ಎಡಗೈ ಆಟಗಾರ ತಿಳಿಸಿದರು.

ಇನಿಂಗ್ಸ್ ಕಟ್ಟುವ ಜವಾಬ್ದಾರಿ ತೆಗೆದುಕೊಂಡಿದ್ದೆ

“ಬ್ಯಾಟಿಂಗ್ ಮಾಡಲು ವಿಕೆಟ್ (ಪಿಚ್) ತುಂಬಾ ಚೆನ್ನಾಗಿದ್ದು, ತಾಳ್ಮೆ ಆಟ ಪ್ರದರ್ಶಿಸಲು ಬಯಸಿದ್ದೆ. ಆದ್ದರಿಂದಲೇ ನಾನು ದೊಡ್ಡ ಇನಿಂಗ್ಸ್ ಕಟ್ಟಲು ಸಾಧ್ಯವಾಯಿತು. ಪಂದ್ಯದಲ್ಲಿ ಒಂದು ತುದಿಯಲ್ಲಿ ವಿಕೆಟ್ ಕಳೆದುಕೊಳ್ಳುತ್ತಿದ್ದೆವು. ಆದ್ದರಿಂದ ನಾನು ಜವಾಬ್ದಾರಿ ತೆಗೆದುಕೊಂಡು ಪಂದ್ಯವನ್ನು ತುಂಬಾ ಆಳದವರೆಗೂ ತೆಗೆದುಕೊಂಡು ಹೋಗಲು ನಿರ್ಧರಿಸಿದ್ದೆ,” ಎಂದು ಯಶಸ್ವಿ ಜೈಸ್ವಾಲ್ ತಿಳಿಸಿದ್ದಾರೆ.

Shares:

Related Posts

Leave a Reply

Your email address will not be published. Required fields are marked *